LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

24 May 2026

PDO ರತ್ನಮ್ಮ ಅವರ ಮೇಲಿನ ಹಲ್ಲೆ ಪ್ರಕರಣ: ಸಂಘದ ದಿಟ್ಟ ಹೋರಾಟಕ್ಕೆ ಸಂದ ಜಯ; ಗ್ರಾಮ ಪಂಚಾಯತ್ ಸದಸ್ಯೆ ತಕ್ಷಣದಿಂದ ವಜಾ, 6 ವರ್ಷ ಚುನಾವಣೆ ಸ್ಪರ್ಧೆಗೆ ನಿಷೇಧ!

ಬೆಂಗಳೂರು: ಕೊಪ್ಪಳ ಜಿಲ್ಲೆಯ ಹಿರೇಮ್ಯಾಗೇರಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರತ ಮಹಿಳಾ ಪಿಡಿಒ ಅಧಿಕಾರಿ ಶ್ರೀಮತಿ ರತ್ನಮ್ಮ ಗುಂಡಣ್ಣವರ ಇವರ ಮೇಲೆ ನಡೆದ ಭೌತಿಕ ಹಲ್ಲೆ ಮತ್ತು ದೌರ್ಜನ್ಯದ ವಿರುದ್ಧ 'ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ ಗ್ರೇಡ್) ಹುದ್ದೆ ಉನ್ನತೀಕರಣ ಸಂಘ'ವು ಅತ್ಯಂತ ಜವಾಬ್ದಾರಿಯುತ ಹಾಗೂ ಸೌಮ್ಯ ಮಾರ್ಗದಲ್ಲಿ ರಾಜ್ಯಾದ್ಯಂತ ಬೃಹತ್ ಮಟ್ಟದ ಹೋರಾಟವನ್ನು ಸಂಘಟಿಸಿ ಸೈ ಎನಿಸಿಕೊಂಡಿದೆ.

ಒಂದು ಜವಾಬ್ದಾರಿಯುತ ನೌಕರರ ಸಂಘಟನೆಯಾಗಿ ಕಾನೂನು ಚೌಕಟ್ಟನ್ನು ಗೌರವಿಸುತ್ತಲೇ, ಅಧಿಕಾರಿಗಳ ಹಿತರಕ್ಷಣೆಗಾಗಿ ಇಡೀ ರಾಜ್ಯದ ನೌಕರರನ್ನು ಒಗ್ಗೂಡಿಸಿ ಸರ್ಕಾರಕ್ಕೆ ತೀವ್ರ ಒತ್ತಡ ಹೇರುವಲ್ಲಿ ಈ ಸಂಘದ ತಳಮಟ್ಟದ ಕಾರ್ಯವೈಖರಿ ನಿಜಕ್ಕೂ ಅತ್ಯಂತ ಶ್ಲಾಘನೀಯವಾಗಿದೆ

ಸಂಘದ ಮನವಿ ಪತ್ರ
ಸಂಘದ ಮನವಿ & ಸರ್ಕಾರದ ಆದೇಶ ಪ್ರತಿ
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮನವಿ ಪತ್ರಗಳ ಸಲ್ಲಿಕೆ: ಪ್ರಾದೇಶಿಕ ಕಛೇರಿಗಳ ಗಮನ ಸೆಳೆದ ಸಂಘ:

ಘಟನೆ ನಡೆದ ದಿನದಿಂದಲೂ ಅಧಿಕಾರಿಗಳ ನೈತಿಕ ಸ್ಥೆರ್ಯ ಕುಸಿಯದಂತೆ ನೋಡಿಕೊಳ್ಳಲು ಸಂಘವು ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಯಾವುದೇ ರೀತಿಯ ಉದ್ವೇಗಕ್ಕೆ ಒಳಗಾಗದೆ, ಅತ್ಯಂತ ಶಿಸ್ತುಬದ್ಧವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಇಲಾಖಾ ವ್ಯಾಪ್ತಿಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಒಟ್ಟಾಗಿ ಧ್ವನಿ ಎತ್ತಿದರು.

  • ಇಲಾಖೆಯ ಉನ್ನತ ಹಂತದಲ್ಲಿ ನ್ಯಾಯ ದೊರಕಿಸಿಕೊಡಲು ರಾಜ್ಯದ ನಾಲ್ಕೂ ವಿಭಾಗಗಳ ಪ್ರಾದೇಶಿಕ ಆಯುಕ್ತರ (Regional Commissioner) ಕಛೇರಿಗಳಿಗೆ ಸಂಘದ ವತಿಯಿಂದ ಅಧಿಕೃತವಾಗಿ ಮನವಿ ಪತ್ರಗಳನ್ನು ಸಲ್ಲಿಸಲಾಯಿತು.

  • ವರ್ಷಗಳಿಂದ ಪ್ರಾದೇಶಿಕ ಕಛೇರಿಗಳಲ್ಲಿ ತೀರ್ಪಾಗದೆ ಬಾಕಿ ಉಳಿದಿದ್ದ ಪಿಡಿಒಗಳ ಮೇಲಿನ ಹಲ್ಲೆ ಪ್ರಕರಣಗಳ ತನಿಖಾ ಕಡತಗಳನ್ನು ಕಾಲಮಿತಿಯೊಳಗೆ ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಸಂಘವು ಈ ಮನವಿ ಪತ್ರಗಳ ಮೂಲಕ ಕಟ್ಟುನಿಟ್ಟಿನ ಆಗ್ರಹ ಮಂಡಿಸಿತು.

ಒಟ್ಟು 63 ತಾಲ್ಲೂಕುಗಳಲ್ಲಿ ಪ್ರತಿಧ್ವನಿಸಿದ ಅಧಿಕಾರಿಗಳ ಧ್ವನಿ!:

ಈ ನ್ಯಾಯಸಮ್ಮತ ಹೋರಾಟದ ಕಿಚ್ಚು ತಾಲ್ಲೂಕು ಮಟ್ಟದಲ್ಲೂ ಅತ್ಯಂತ ಯಶಸ್ವಿಯಾಗಿ ಹರಡಿತು. ಇಡೀ ರಾಜ್ಯದ ಒಟ್ಟು 63 ತಾಲ್ಲೂಕುಗಳಲ್ಲಿ ಸಂಘದ ನೇತೃತ್ವದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಒಟ್ಟಾಗಿ ಸೇರಿ ಆಯಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ (EO) ಮೂಲಕ ಸರ್ಕಾರಕ್ಕೆ ಅಧಿಕೃತ ಮನವಿ ಪತ್ರಗಳನ್ನು ರವಾನಿಸಿದರು.

  • ಒಂದೇ ಧ್ವನಿಯಲ್ಲಿ 63 ತಾಲ್ಲೂಕುಗಳಿಂದ ಹರಿದುಬಂದ ಈ ಮನವಿ ಪತ್ರಗಳ ಮಹಾಪೂರವು, ಸದಾ ಮಂದಗತಿಯಲ್ಲಿ ಸಾಗುತ್ತಿದ್ದ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ರಾಜಕೀಯ ವಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು.

  • ಸರ್ಕಾರಿ ಮಹಿಳಾ ನೌಕರರ ಮೇಲಿನ ಇಂತಹ ದೌರ್ಜನ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಮತ್ತು ಕಾನೂನು ಚೌಕಟ್ಟಿನಲ್ಲಿಯೇ ಇದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂಬ ಖಡಕ್ ಸಂದೇಶವನ್ನು ಈ 63 ತಾಲ್ಲೂಕುಗಳ ಸಂಘಟಿತ ಮನವಿಗಳು ಸಮಾಜಕ್ಕೆ ರವಾನಿಸಿದವು.

ಶಾಂತಿಯುತ ಸಂಘಟಿತ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ!

ರಾಜ್ಯದ ಎಲ್ಲಾ ಜಿಲ್ಲೆಗಳು, ಪ್ರಾದೇಶಿಕ ಕಛೇರಿಗಳು ಹಾಗೂ 63 ತಾಲ್ಲೂಕುಗಳಿಂದ ಹರಿದುಬಂದ ನಿರಂತರ ಮನವಿ ಪತ್ರಗಳ ಒತ್ತಡ ಮತ್ತು ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ರಮೇಶ್ ನಡಗೇರಿ ಅವರ ಜವಾಬ್ದಾರಿಯುತ ಮಧ್ಯಪ್ರವೇಶದ ಫಲವಾಗಿ , ಇಲಾಖೆಯು ತನಿಖೆಯನ್ನು ಅತ್ಯಂತ ಚುರುಕುಗೊಳಿಸಬೇಕಾಗಿ ಬಂದಿತು.

ಅಂತಿಮವಾಗಿ ಸಿಸಿಟಿವಿ ಸಾಕ್ಷ್ಯಗಳ ಆಧಾರದ ಮೇಲೆ ಆರೋಪ ಸಾಬೀತಾಗಿ, ಹಲ್ಲೆಕೋರ ಹಿರೇಮ್ಯಾಗೇರಿ ಗ್ರಾ.ಪಂ. ಸದಸ್ಯೆ ಶಾಂತಮ್ಮ ಬಂಡಿವಡ್ಡರ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಿ, ಮುಂದಿನ 6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಇಲಾಖೆಯು ಐತಿಹಾಸಿಕ ಕಠಿಣ ಆದೇಶ ಹೊರಡಿಸಿತು.


ನೌಕರರ ಸಂಘಟನೆಗೆ ಹೊಸದೊಂದು ದಿಕ್ಸೂಚಿ

ಸಂಕಷ್ಟದಲ್ಲಿದ್ದ ಸಹೋದ್ಯೋಗಿ ಮಹಿಳಾ ಅಧಿಕಾರಿಗೆ ನ್ಯಾಯ ಕೊಡಿಸಲು ಕರ್ನಾಟಕದ ಎಲ್ಲಾ ಜಿಲ್ಲೆ ಹಾಗೂ 63 ತಾಲ್ಲೂಕುಗಳನ್ನು ಏಕಕಾಲದಲ್ಲಿ ಸಜ್ಜುಗೊಳಿಸಿ, ಮನವಿ ಪತ್ರಗಳ ಮೂಲಕ ಸರ್ಕಾರದ ಮೇಲೆ ಯಶಸ್ವಿ ಒತ್ತಡ ತಂದ 'ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಉನ್ನತೀಕರಣ ಸಂಘ'ದ ಸಂಘಟನಾ ಶಕ್ತಿ ಇಡೀ ರಾಜ್ಯದ ಸರ್ಕಾರಿ ನೌಕರರ ವಲಯಕ್ಕೆ ಮಾದರಿಯಾಗಿದೆ ಮತ್ತು ಅತ್ಯಂತ ಶ್ಲಾಘನೀಯವಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ, ಕೇವಲ ಮನವಿ ಪತ್ರಗಳ ಸಲ್ಲಿಕೆಯ ಮೂಲಕವೇ ಇಂತಹದೊಂದು ಐತಿಹಾಸಿಕ ಬದಲಾವಣೆ ತಂದಿದ್ದು ಸಂಘದ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ.


"ತಡವಾಗಿಯಾದರೂ ನನಗೆ ನ್ಯಾಯ ಸಿಕ್ಕಿರುವುದು ನೆಮ್ಮದಿ ತಂದಿದೆ. ಆದರೆ, ಈ ಆದೇಶ ಇನ್ನೂ ಮೊದಲೇ ಹೊರಬಂದಿದ್ದರೆ ಇಂತಹ ದುಷ್ಕೃತ್ಯ ಎಸಗುವವರಿಗೆ ಒಂದು ಬಲವಾದ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತಿತ್ತು. ನ್ಯಾಯಕ್ಕಾಗಿ ನಾನು ನಡೆಸಿದ ಈ ಹೋರಾಟದಲ್ಲಿ 'ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತೀಕರಣ ಸಂಘವು' ನನ್ನ ಬೆನ್ನೆಲುಬಾಗಿ ನಿಂತು ಧೈರ್ಯ ತುಂಬಿದೆ. ಇದರ ಜೊತೆಗೆ RDPR ಇಲಾಖೆಯ ಎಲ್ಲಾ ಸಿಬ್ಬಂದಿ ಮತ್ತು ಇತರೆ ನೌಕರರ ಸಂಘದವರು ಬೆಂಬಲವಾಗಿದ್ದರು ಆದ್ದರಿಂದ ಎಲ್ಲಾ ಸಂಘದ ಪದಾಧಿಕಾರಿಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು."

-ಶ್ರೀಮತಿ ರತ್ನಮ್ಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಿರೇಮ್ಯಾಗೇರಿ

No comments:

Post a Comment