ಕಲ್ಲಾಪುರ ಗ್ರಾಮ ಪಂಚಾಯತ್ ಕಚೇರಿಯ ಆ ಹಳೆಯ ಕುರ್ಚಿಯಲ್ಲಿ ಕುಳಿತಿದ್ದ ಪಿಡಿಒ ಆನಂದ್ಗೆ ಸಮಯದ ಅರಿವೇ ಇರಲಿಲ್ಲ. ಎದುರಿಗಿದ್ದ ಫೈಲುಗಳ ರಾಶಿಗಿಂತ ಅವರ ಮನಸ್ಸಿನ ಮೇಲಿದ್ದ ಒತ್ತಡದ ತೂಕವೇ ಹೆಚ್ಚಾಗಿತ್ತು. ಬೆಳಿಗ್ಗೆ ಕಚೇರಿಗೆ ಬಂದ ಕೂಡಲೇ ಸ್ಥಳೀಯ ಪತ್ರಕರ್ತನೊಬ್ಬ "ನಮ್ಮ ಪತ್ರಿಕೆ ವಾರ್ಷಿಕೋತ್ಸವಕ್ಕೆ ದೇಣಿಗೆ ನೀಡಿ, ಇಲ್ಲದಿದ್ದರೆ ನಿಮ್ಮ ವಿರುದ್ಧ ಸರಣಿ ವರದಿ ಮಾಡಬೇಕಾಗುತ್ತದೆ" ಎಂದು ನಯವಾಗಿಯೇ ಬೆದರಿಕೆ ಹಾಕಿ ಹೋಗಿದ್ದ. ಆನಂದ್ ತನ್ನ ತತ್ವಕ್ಕೆ ಮಣಿಯದೆ ಹಣ ನಿರಾಕರಿಸಿದ್ದೇ ತಡ, ಮಧ್ಯಾಹ್ನವಾಗುವಷ್ಟರಲ್ಲಿ ಮೊಬೈಲ್ನಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡತೊಡಗಿತು.
"ಪಿಡಿಒ ಆನಂದ್ ಭ್ರಷ್ಟ, ಜನರ ಕೆಲಸಕ್ಕೆ ವಿಳಂಬ" ಎಂಬ ಆ ಶೀರ್ಷಿಕೆ ನೋಡಿ ಆನಂದ್ ಕಣ್ಣಲ್ಲಿ ನೀರು ತುಂಬಿತ್ತು; ಏಕೆಂದರೆ ಕಳೆದ ವಾರವಷ್ಟೇ ತಮ್ಮ ಸ್ವಂತ ಜೇಬಿನಿಂದ ಹಣ ಹಾಕಿ ಹಳ್ಳಿಯ ಕುಡಿಯುವ ನೀರಿನ ಪೈಪ್ ಸರಿಪಡಿಸಿದ್ದರು.
ಆ ಶ್ರಮ ಆ ಒಂದು ಸುಳ್ಳು ಸುದ್ದಿಯ ಅಡಿಯಲ್ಲಿ ಹೂತು ಹೋಗಿತ್ತು.
ಆ ನೋವಿನಿಂದ ಚೇತರಿಸಿಕೊಳ್ಳುವಷ್ಟರಲ್ಲಿ, ಯಾವುದೋ ಒಂದು ಸಂಘಟನೆಯ ಹತ್ತು ಜನ ಕಚೇರಿಗೆ ನುಗ್ಗಿ ಮೇಜಿನ ಮೇಲೆ ಕೈ ಕುಟ್ಟುತ್ತಾ "ನಮ್ಮ ಕಾರ್ಯಕ್ರಮಕ್ಕೆ ಹಣ ನೀಡಿ, ಇಲ್ಲದಿದ್ದರೆ ನಿಮ್ಮ ವಿರುದ್ಧ ಧರಣಿ ಕೂರುತ್ತೇವೆ" ಎಂದು ಅಬ್ಬರಿಸಿದರು.
ಆನಂದ್ ಅಸಹಾಯಕತೆಯಿಂದ ಮೇಲಧಿಕಾರಿಗಳಿಗೆ ಕರೆ ಮಾಡಿದರೆ, ಅಲ್ಲಿಂದ ಬಂದದ್ದು ಸಾಂತ್ವನದ ಮಾತುಗಳಲ್ಲ, ಬದಲಾಗಿ "ಯಾಕೆ ಹೀಗೆ ದೂರುಗಳು ಬರುತ್ತಿವೆ? ನಾಳೆ ಬೆಳಿಗ್ಗೆ ಪ್ರಗತಿಯ ವರದಿ ಮತ್ತು ನಮಗೆ ತಲುಪಬೇಕಾದ್ದು ತಲುಪದಿದ್ದರೆ ಸಸ್ಪೆನ್ಷನ್ ನೋಟಿಸ್ ರೆಡಿ ಇರುತ್ತದೆ" ಎಂಬ ಧಮಕಿ.
ಇಲಾಖೆಯ ಒಳಗಿರುವ ಅದೃಶ್ಯ ಕಮಿಷನ್ ಜಾಲಕ್ಕೆ ಬಲಿಯಾಗದಿದ್ದರೆ ಪ್ರಗತಿಯೂ ಶೂನ್ಯವೆಂಬ ಕಹಿ ಸತ್ಯ ಅವರನ್ನು ಮತ್ತಷ್ಟು ಕುಗ್ಗಿಸಿತು.
ಸಂಜೆ ಹೊತ್ತಿಗೆ ನಡೆದ ಗ್ರಾಮ ಸಭೆಯಲ್ಲಿ ಶಾಸಕರು ಜನರ ಮುಂದೆಯೇ ಆನಂದ್ರನ್ನು ಅಣಕಿಸಿದರು.
"ನಿಮ್ಮ ಕೆಲಸ ಮಾಡದ ಈ ಅಧಿಕಾರಿಯನ್ನು ಏನು ಮಾಡಬೇಕು?" ಎಂದು ಜನರನ್ನು ಉದ್ರೇಕಿಸಿದರು. ಶಾಸಕರು ಹೇಳಿದ ಅನರ್ಹ ವ್ಯಕ್ತಿಗಳಿಗೆ ಮನೆ ಮಂಜೂರು ಮಾಡಲು ಒಪ್ಪದಿದ್ದಕ್ಕೆ ಸಿಕ್ಕ ಬಹುಮಾನವಿದು ಎಂಬುದು ಆನಂದ್ಗೆ ಮಾತ್ರ ತಿಳಿದಿತ್ತು. ಕಚೇರಿಯ ಒಳಗಿದ್ದ ಅದೇ ಗ್ರಾಮದ ಕಂಪ್ಯೂಟರ್ ಆಪರೇಟರ್ ಕೂಡ ಈ ತಮಾಷೆಯನ್ನು ನೋಡಿ ನಗುತ್ತಿದ್ದ.
ಕೆಲಸ ಮಾಡಲು ಒತ್ತಡ ಹಾಕಿದ್ದಕ್ಕೆ ಆತ ತನ್ನ ಆಪ್ತರ ಮೂಲಕ ಕಚೇರಿಯಲ್ಲೇ ಗಲಾಟೆ ಮಾಡಿಸಿ ಆನಂದ್ರನ್ನು ಒಂಟಿಯಾಗಿಸಿದ್ದ.
ರಾತ್ರಿ ಹತ್ತು ಗಂಟೆಗೆ ಮನೆಗೆ ಹೋಗಿ ಊಟದ ತಟ್ಟೆಯ ಮುಂದೆ ಕುಳಿತಾಗಲೂ ಫೋನ್ ರಿಂಗಣಿಸುತ್ತಲೇ ಇತ್ತು. ಯಾರೋ ಒಬ್ಬ ರಾಜಕಾರಣಿ ಅಥವಾ ಬೆದರಿಕೆ ಹಾಕುವವನ ಕರೆ ಅದಾಗಿತ್ತು.
ಪತ್ನಿ ಬಂದು ಹತ್ತಿರ ಕುಳಿತು "ಬಿಪಿ ಮಾತ್ರೆ ತಿಂದ್ರಾ? ಯಾಕೆ ಹೀಗೆ ಸುಸ್ತಾಗಿದ್ದೀರಾ?" ಎಂದು ಆತಂಕದಿಂದ ಕೇಳಿದಾಗ ಆನಂದ್ ಅವಳ ಕಣ್ಣುಗಳನ್ನು ನೋಡಲಾಗದೆ ತಲೆತಗ್ಗಿಸಿದರು.
ಕಚೇರಿಯ ಅವಮಾನ, ಬೆದರಿಕೆ ಮತ್ತು ಸುಳ್ಳು ಸುದ್ದಿಗಳ ನಡುವೆ ಸಿಲುಕಿ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿತ್ತು. ಸಣ್ಣ ವಯಸ್ಸಿನಲ್ಲೇ ಕೈಯಲ್ಲಿ ಮಾತ್ರೆಗಳ ಡಬ್ಬಿ ಹಿಡಿದು ಕುಳಿತ ಆನಂದ್ಗೆ ತನ್ನ ಕುಟುಂಬದ ಜೊತೆ ಕಳೆಯಲು ಒಂದು ನಿಮಿಷದ ನೆಮ್ಮದಿಯೂ ಇಲ್ಲದಂತಾಗಿತ್ತು.
ಮಗುವಿನ ಸ್ಕೂಲ್ ಫಂಕ್ಷನ್ಗೆ ಹೋಗಲಾಗಲಿಲ್ಲ, ಹೆಂಡತಿಯ ಅನಾರೋಗ್ಯಕ್ಕೆ ಸಮಯ ಕೊಡಲಾಗಲಿಲ್ಲ. ಕಚೇರಿಯ ಒತ್ತಡ ಮತ್ತು ನಿರಂತರ ನೋಟಿಸ್ಗಳ ಭಯದಲ್ಲಿ ಮನೆಯೇ ಒಂದು ನರಕದಂತಾಗಿತ್ತು.
ಪ್ರತಿಯೊಂದು ಫೋನ್ ಕರೆಯೂ ಒಂದು ಹೊಸ ಬೆದರಿಕೆಯಾಗಿ ಕಾಣುತ್ತಿತ್ತು.
ಒತ್ತಡದ ಪರಿಣಾಮವಾಗಿ ಆನಂದ್ಗೆ ತೀವ್ರವಾದ ಎದೆನೋವು ಕಾಣಿಸಿಕೊಂಡಾಗಲೂ, ಅವರು ಆಸ್ಪತ್ರೆಗೆ ಹೋಗುವ ಬದಲು ಲೋಕಾಯುಕ್ತಕ್ಕೆ ಅಥವಾ ಮೇಲಧಿಕಾರಿಗಳಿಗೆ ಉತ್ತರ ನೀಡುವ ಫೈಲುಗಳನ್ನೇ ಸಿದ್ಧಪಡಿಸುತ್ತಿದ್ದರು.
ಕುಟುಂಬದ ಕಣ್ಣೀರು ಮತ್ತು ಅವರ ಪ್ರೀತಿ ಆನಂದ್ಗೆ ಕಾಣಿಸಲೇ ಇಲ್ಲ. ಅವರ ಇಡೀ ಬದುಕು ಕೇವಲ ಆ ಒಂದೊಂದು ಸಹಿಯ ಸುತ್ತಲೇ ಸುತ್ತುತ್ತಿತ್ತು. ಕೊನೆಗೆ ಒಂದು ದಿನ, ಹಿರಿಯ ಅಧಿಕಾರಿಗಳಿಂದ ಅಮಾನತು ಆದೇಶ ಬಂದೇ ಬಿಟ್ಟಿತು.
"ಕರ್ತವ್ಯ ಲೋಪ" ಎಂಬ ಆ ಒಂದೇ ಒಂದು ಸಾಲು ಅವರ ಹತ್ತಾರು ವರ್ಷದ ಪ್ರಾಮಾಣಿಕ ಸೇವೆಯನ್ನು ಸುಟ್ಟು ಹಾಕಿತು. ಕೆಲಸವೂ ಹೋಯಿತು, ಅತ್ತ ಆರೋಗ್ಯವೂ ಕೈಕೊಟ್ಟಿತು.
ಮನೆಯಲ್ಲಿ ಹೆಂಡತಿ ಮಗುವಿನ ಎದುರು ತಲೆ ಎತ್ತಿ ನಿಲ್ಲುವ ಶಕ್ತಿಯೂ ಅವರಿಗಿರಲಿಲ್ಲ. ವ್ಯವಸ್ಥೆಯ ವಿರುದ್ಧ ಸೆಣಸಲು ಹೋಗಿ ಆನಂದ್ ತನ್ನ ಆರೋಗ್ಯ, ನೆಮ್ಮದಿ ಮತ್ತು ಸುಂದರ ಸಂಸಾರವನ್ನೇ ಬಲಿ ಕೊಟ್ಟಿದ್ದರು. ಕನ್ನಡಿಯ ಮುಂದೆ ನಿಂತು ನೋಡಿದಾಗ ಅವರಿಗೆ ಕಂಡಿದ್ದು ಒಬ್ಬ ವಿಜಯೀ ಅಧಿಕಾರಿಯಲ್ಲ, ಬದಲಾಗಿ ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾದ ಒಬ್ಬ ಅಸ್ಥಿಪಂಜರ ಮಾತ್ರ.
ಸಮಾಜಕ್ಕೆ ಆತ ಒಬ್ಬ "ಕೆಲಸ ಮಾಡದ ಅಧಿಕಾರಿ"ಯಾಗಿ ಕಂಡರೆ, ಇಲಾಖೆಗೆ ಆತ ಒಬ್ಬ "ಅನುಸರಿಸದ ಸಿಬ್ಬಂದಿ"ಯಾಗಿ ಕಂಡ. ಆದರೆ ಆನಂದ್ಗೆ ಮಾತ್ರ ತಿಳಿದಿತ್ತು, ತಾವು ಕಳೆದುಕೊಂಡ ನೆಮ್ಮದಿ ಮತ್ತು ಆರೋಗ್ಯವನ್ನು ಯಾವ ನ್ಯಾಯಾಲಯವೂ ಮರಳಿ ನೀಡಲು ಸಾಧ್ಯವಿಲ್ಲ ಎಂದು. ಹರಿಯುವ ಕಣ್ಣೀರನ್ನು ಒರೆಸಿಕೊಳ್ಳುವ ಶಕ್ತಿಯೂ ಇಲ್ಲದಂತೆ ಆನಂದ್ ಶೂನ್ಯಕ್ಕೆ ದೃಷ್ಟಿ ನೆಟ್ಟು ಕುಳಿತಿದ್ದರು.
No comments:
Post a Comment