LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

03 June 2026

ಸುಳ್ಳು ದೂರು ನೀಡಿ ಬ್ಲ್ಯಾಕ್‌ಮೇಲ್ ಮಾಡುವವರಿಗೆ ಶಾಕ್: ಯಾದಗಿರಿಯಲ್ಲಿ 20 ವ್ಯಕ್ತಿಗಳು, ಸಂಘಟನೆಗಳು ಒಂದು ವರ್ಷ ಕಪ್ಪು ಪಟ್ಟಿಗೆ!

ಯಾದಗಿರಿ: ಸಾರ್ವಜನಿಕ ದೂರು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡು, ಸರ್ಕಾರಿ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಸುಳ್ಳು ಮತ್ತು ಆಧಾರರಹಿತ ದೂರುಗಳನ್ನು ಸಲ್ಲಿಸಿ ಆಡಳಿತಕ್ಕೆ ಅಡ್ಡಿಪಡಿಸುತ್ತಿದ್ದ ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ಯಾದಗಿರಿ ಜಿಲ್ಲಾ ಪಂಚಾಯತ್ ಕಠಿಣ ಕಾನೂನು ಚಾಟಿ ಬೀಸಿದೆ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 20 ದೂರುದಾರರು ಹಾಗೂ ಅವರ ಸಂಘಟನೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಒಂದು ವರ್ಷದ ಅವಧಿಗೆ ಕಪ್ಪು ಪಟ್ಟಿಗೆ (Blacklist) ಸೇರಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEO) ಆದೇಶ ಹೊರಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಯಾದಗಿರಿ ಜಿಲ್ಲಾ ಪಂಚಾಯತ್ ಮತ್ತು ಅದರ ಅಧೀನ ಕಚೇರಿಗಳ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನೊಳಗೊಂಡ ದೂರುಗಳನ್ನು ಸಲ್ಲಿಸಿದ್ದರು. ದೂರುಗಳ ಗಂಭೀರತೆಯನ್ನು ಪರಿಗಣಿಸಿದ ಕಚೇರಿಯು ಪ್ರಾಥಮಿಕ ಪರಿಶೀಲನೆ, ತನಿಖಾ ಪ್ರಕ್ರಿಯೆ ಹಾಗೂ ದಾಖಲೆಗಳ ಸಂಗ್ರಹಣೆಯನ್ನು ಕೈಗೊಂಡಿತ್ತು.

ಆದರೆ, ತನಿಖಾ ಪ್ರಕ್ರಿಯೆಗಳು ಪ್ರಾರಂಭವಾಗುತ್ತಿದ್ದಂತೆ ದೂರುದಾರರು ತಮ್ಮ ಆರೋಪಗಳಿಗೆ ಯಾವುದೇ ಸಮರ್ಪಕ ಹಾಗೂ ದೃಢವಾದ ದಾಖಲೆ ಅಥವಾ ಸಾಕ್ಷ್ಯಗಳನ್ನು ಒದಗಿಸದೇ ದೂರುಗಳನ್ನು ಹಿಂತೆಗೆದುಕೊಂಡಿದ್ದಾರೆ. ಇಂತಹ ನಡವಳಿಕೆಯು ಕಚೇರಿಯ ದೈನಂದಿನ ಆಡಳಿತಾತ್ಮಕ ಕಾರ್ಯವೈಖರಿಗೆ ತೀವ್ರ ಅಡ್ಡಿಪಡಿಸುವ, ಸರ್ಕಾರಿ ಸಂಪನ್ಮೂಲ ಹಾಗೂ ಸಮಯವನ್ನು ಅನಾವಶ್ಯಕವಾಗಿ ಪೋಲು ಮಾಡುವ ಮತ್ತು ಅಧಿಕಾರಿಗಳ ಖ್ಯಾತಿಗೆ ಧಕ್ಕೆ ತರುವ ದುರುದ್ದೇಶಪೂರಿತ ಕ್ರಮ ಎಂದು ಜಿ.ಪಂ. ಆಡಳಿತ ತೀವ್ರವಾಗಿ ಪರಿಗಣಿಸಿದೆ.

ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು

ದೂರು ನೀಡಿ ಹಿಂತೆಗೆದುಕೊಂಡ ದೂರುದಾರರಿಗೆ ಜಿ.ಪಂ. ವತಿಯಿಂದ ನೋಟಿಸ್ ಜಾರಿ ಮಾಡಿ, ಆಡಳಿತಾತ್ಮಕ ವ್ಯವಹಾರಗಳಿಗೆ ತಗುಲಿದ ವೆಚ್ಚವನ್ನು ಜಿಲ್ಲಾ ಪಂಚಾಯತಿ ಕಚೇರಿಯ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲು ಮತ್ತು ನಿಮ್ಮನ್ನು ಏಕೆ ಕಪ್ಪು ಪಟ್ಟಿಗೆ ಸೇರಿಸಬಾರದು ಎಂದು ಲಿಖಿತ ಸಮಜಾಯಿಷಿ ಕೇಳಲಾಗಿತ್ತು. ಆದರೆ, ಈ ಪೈಕಿ ಕೆಲವರು ನೀಡಿದ ಉತ್ತರಗಳು ಒಪ್ಪುವಂತಿರಲಿಲ್ಲ ಮತ್ತು ಇನ್ನು ಕೆಲವರು ನಿಗದಿತ ಅವಧಿಯಲ್ಲಿ ಯಾವುದೇ ಉತ್ತರ ನೀಡದ ಕಾರಣ, ಸಾರ್ವಜನಿಕ ದೂರು ವಿಲೇವಾರಿ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಕಠಿಣ ಆದೇಶ ಹೊರಡಿಸಲಾಗಿದೆ.

ಕಪ್ಪು ಪಟ್ಟಿಗೆ ಸೇರಿದ ಪ್ರಮುಖ ಸಂಘಟನೆಗಳು/ವ್ಯಕ್ತಿಗಳು:

ಒಟ್ಟು 20 ಜನರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು, ಅದರಲ್ಲಿ ಪ್ರಮುಖವಾಗಿ ಈ ಕೆಳಗಿನ ಸಂಘಟನೆಗಳ ಪದಾಧಿಕಾರಿಗಳು ಸೇರಿದ್ದಾರೆ:

  • ಕರ್ನಾಟಕ ರಕ್ಷಣಾ ವೇದಿಕೆ ಯಾದಗಿರಿ (ಶ್ರೀ ಯಂಕಪ್ಪ ಮಕಾಶಿ, ಜಿಲ್ಲಾ ಉಪಾಧ್ಯಕ್ಷರು).

  • ಕರ್ನಾಟಕ ರಕ್ಷಣಾ ಸೇನೆ (ನೊ) ಜಿಲ್ಲಾ ಘಟಕ ಯಾದಗಿರಿ (ಶ್ರೀ ಪ್ರಭುಗೌಡ ವಕ್ರಾಣಿ, ಜಿಲ್ಲಾಧ್ಯಕ್ಷರು).

  • ದಲಿತ ಸಂಘರ್ಷ ಸಮಿತಿ, ತಾಲ್ಲೂಕು ಸಮಿತಿ ಶಹಾಪೂರ (ಶ್ರೀ ಲಕ್ಷ್ಮಣ್ ಆರ್ ಹಳಿಸಗರ ಹಾಗೂ ಶ್ರೀ ಹುಸೇನ ದೊಡ್ಮಿನಿ).

  • ಭೀಮ್ ಆರ್ಮಿ, ಕರ್ನಾಟಕ ಏಕತಾ ಮಿಷನ್ ಜಿಲ್ಲಾ ಸಮಿತಿ ಯಾದಗಿರಿ (ಶ್ರೀ ಸೈದಪ್ಪ ಎಂ. ಕಣಜಿಕರ್, ಜಿಲ್ಲಾಧ್ಯಕ್ಷರು).

  • ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಜಿಲ್ಲಾ ಶಾಖೆ ಯಾದಗಿರಿ (ಶ್ರೀ ಮರೆಪ್ಪ ಕ್ರಾಂತಿ, ಜಿಲ್ಲಾ ಸಂಚಾಲಕರು ಮತ್ತು ವಿಶ್ವರಾಜ ಛಲವಾದಿ).

  • ವರ್ತೂರು ಪ್ರಕಾಶ ಯುವ ಘರ್ಜನೆ (ರಿ) ಜಿಲ್ಲಾ ಘಟಕ ಯಾದಗಿರಿ (ಶ್ರೀ ಐಕೂರು ಅಶೋಕ, ಅಧ್ಯಕ್ಷರು).

  • ವಿಶ್ವ ಮಾನವ ಡಾ|| ಭೀಮರಾವ್ ಅಂಬೇಡ್ಕರ್ ರಕ್ಷಣಾ ವೇದಿಕೆ(ರಿ) (ಶ್ರೀ ಬಸವರಾಜ ಸಿ ಹಾದಿಮನಿ ಮತ್ತು ಶ್ರೀ ಬಲಭೀಮಪ್ಪ.ಬಿ ದೊಡ್ಡಮನಿ).

  • ಇದರೊಂದಿಗೆ ಗೋಗಿ ಹಾಗೂ ರಾಜನಕೊಳ್ಳೂರು ಗ್ರಾಮ ಪಂಚಾಯತ್‌ನ ಕೆಲವು ಸದಸ್ಯರು/ಅಧ್ಯಕ್ಷರು ಮತ್ತು ಇತರ ಸಾರ್ವಜನಿಕರು ಈ ಪಟ್ಟಿಯಲ್ಲಿದ್ದಾರೆ.

ಷರತ್ತುಗಳು ಮತ್ತು ಮುಂದಿನ ಕಠಿಣ ಕ್ರಮಗಳು:

  1. ದೂರು ಸ್ವೀಕಾರವಿಲ್ಲ: ಕಪ್ಪು ಪಟ್ಟಿಗೆ ಸೇರಿಸಲಾದ ಮೇಲ್ಕಂಡ ಯಾವುದೇ ವ್ಯಕ್ತಿಗಳು/সংಘಟನೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಜಿಲ್ಲಾ ಪಂಚಾಯತ್ ಮತ್ತು ಅದರ ಅಧೀನ ಕಚೇರಿಗಳಿಗೆ ಸಲ್ಲಿಸುವ ಯಾವುದೇ ದೂರುಗಳನ್ನು ಮುಂದಿನ ಒಂದು ವರ್ಷದ ಅವಧಿಗೆ ಸ್ವೀಕರಿಸಲಾಗುವುದಿಲ್ಲ ಹಾಗೂ ಪರಿಗಣಿಸಲಾಗುವುದಿಲ್ಲ.

  2. ಬಿಎನ್‌ಎಸ್ ಅಡಿ ಕೇಸ್: ಈ ಆದೇಶವನ್ನು ಮೀರಿ ಮತ್ತೆ ಸುಳ್ಳು ಅಥವಾ ಕಿರುಕುಳಕಾರಿ ದೂರುಗಳನ್ನು ಮುಂದುವರಿಸಿದಲ್ಲಿ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 212, 217, 236, 240 ಮತ್ತು 248 ರ ಅಡಿಯಲ್ಲಿ ನಿಯಮಾನುಸಾರ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.

  3. ಲೋಕಾಯುಕ್ತ ಕಾಯ್ದೆ ಅಡಿ ಕ್ರಮ: ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ 2013 ರ ಕಲಂ 46 ರ ಅಡಿಯಲ್ಲಿ ಸುಳ್ಳು ಹಾಗೂ ವ್ಯರ್ಥ ದೂರುಗಳ ಕುರಿತು ಪ್ರತ್ಯೇಕ ಕಾನೂನು ಕ್ರಮ ಜರುಗಿಸಲು ಇಲಾಖೆಗೆ ಮುಕ್ತ ಅವಕಾಶವಿರುತ್ತದೆ.

ಗಮನಿಸಿ:ಆದೇಶದ ಪ್ರತಿಯನ್ನು ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಗ್ರಾಮ ಪಂಚಾಯತ್ ಕಾರ್ಯಾಲಯಗಳಿಗೆ ರವಾನಿಸಲಾಗಿದ್ದು, ಈ ಕಪ್ಪು ಪಟ್ಟಿಯಲ್ಲಿರುವವರಿಂದ ಯಾವುದೇ ದೂರುಗಳನ್ನು ಸ್ವೀಕರಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

No comments:

Post a Comment