ಬೆಂಗಳೂರು: ಗ್ರಾಮೀಣ ಪ್ರದೇಶಗಳ ಜೀವನಾಡಿಯಾಗಿರುವ ಪಾರಂಪರಿಕ ಕೆರೆಗಳನ್ನು ಉಳಿಸಿ, ನವೀಕರಿಸುವ ಮೂಲಕ ಅಂತರ್ಜಲ ವೃದ್ಧಿ ಹಾಗೂ ಸುಸ್ಥಿರ ಕೃಷಿಗೆ ಒತ್ತು ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಮಹತ್ವದ ಕರೆ ನೀಡಿದೆ.
'ಕೆರೆ ಇದ್ದಲ್ಲಿ ಬರಗಾಲ ಇರದು' ಎಂಬ ಧ್ಯೇಯವಾಕ್ಯದೊಂದಿಗೆ ಕೆರೆಗಳ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯತಿಗಳ ಜವಾಬ್ದಾರಿಗಳನ್ನು ಸ್ಪಷ್ಟಪಡಿಸಲಾಗಿದೆ. ಈ ಕುರಿತು ಅಭಿವೃದ್ಧಿ ಅಧಿಕಾರಿಗಳು (PDO) ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳು ಈ ಕೆಳಗಿನಂತಿವೆ:
ಮಾಲಿನ್ಯ ತಡೆ: ಕೆರೆಗಳಿಗೆ ಕಸ-ಕಡ್ಡಿ ಅಥವಾ ರಾಸಾಯನಿಕಗಳು ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.
ತ್ಯಾಜ್ಯ ನೀರು ನಿರ್ವಹಣೆ: ಒಳಚರಂಡಿ ಹಾಗೂ ಕಾರ್ಖಾನೆಗಳ ಕಲುಷಿತ ನೀರನ್ನು ಶುದ್ಧೀಕರಿಸಿದ ನಂತರವೇ ಕೆರೆಗೆ ಬಿಡುವಂತೆ ನೋಡಿಕೊಳ್ಳುವುದು.
ಹೂಳೆತ್ತುವುದು: ಕಾಲಕಾಲಕ್ಕೆ ವೈಜ್ಞಾನಿಕವಾಗಿ ಕೆರೆಯ ಹೂಳೆತ್ತುವ ಮೂಲಕ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವುದು.
ಮಳೆ ನೀರು ಕೊಯ್ಲು: ಮಳೆ ನೀರು ವ್ಯರ್ಥವಾಗದೆ ನೇರವಾಗಿ ಕೆರೆಯನ್ನು ಸೇರುವಂತೆ ಕಾಲುವೆಗಳ ನಿರ್ವಹಣೆ ಮಾಡುವುದು.
೨. ಸೋರಿಕೆ ತಡೆ ಹಾಗೂ ಮೂಲಸೌಕರ್ಯ ನಿರ್ವಹಣೆ
ಕೆರೆಗಳ ನೀರು ವ್ಯರ್ಥವಾಗದಂತೆ ತಡೆಯಲು ಈ ಕೆಳಗಿನ ತಾಂತ್ರಿಕ ಕ್ರಮಗಳಿಗೆ ಸೂಚಿಸಲಾಗಿದೆ:
ಕೋಡಿ ಮತ್ತು ತೂಬುಗಳ ತಪಾಸಣೆ: ಕೆರೆಯ ಕೋಡಿಗಳು ಮತ್ತು ತೂಬುಗಳಲ್ಲಿ ಸೋರಿಕೆ ಇದೆಯೇ ಎಂದು ನಿರಂತರವಾಗಿ ಪರಿಶೀಲಿಸುವುದು.
ಹೊಸ ನಿರ್ಮಾಣ: ಅಗತ್ಯವಿದ್ದಲ್ಲಿ ಹೊಸ ಕೋಡಿ ಅಥವಾ ತೂಬುಗಳನ್ನು ವೈಜ್ಞಾನಿಕವಾಗಿ ನಿರ್ಮಿಸುವುದು.
ಏರಿಗಳ ಬಲವರ್ಧನೆ: ಮಳೆಗಾಲದಲ್ಲಿ ಕೆರೆ ಏರಿಗಳು ಒಡೆಯದಂತೆ ಅಥವಾ ಹಾನಿಯಾಗದಂತೆ ಮುನ್ನೆಚ್ಚರಿಕೆಯಾಗಿ ಏರಿಗಳನ್ನು ಬಲಪಡಿಸುವುದು.
ಕಾಲುವೆಗಳ ಸ್ವಚ್ಛತೆ: ನೀರು ಸರಾಗವಾಗಿ ಹರಿದುಬರುವಂತೆ ಮತ್ತು ಹರಿದು ಹೋಗುವಂತೆ ರಾಜಕಾಲುವೆ ಹಾಗೂ ಉಪಕಾಲುವೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು.
೩. ಪರಿಸರ ಮತ್ತು ಆರ್ಥಿಕ ಸಬಲೀಕರಣ
ಕೆರೆಗಳ ಅಭಿವೃದ್ಧಿಯು ಕೇವಲ ನೀರಿನ ಮೂಲವಲ್ಲ, ಅದು ಗ್ರಾಮದ ಆರ್ಥಿಕ ಸಬಲೀಕರಣಕ್ಕೂ ಪೂರಕವಾಗಿದೆ. ಸುಂದರ ಪರಿಸರ ನಿರ್ಮಾಣ ಮತ್ತು ಕೃಷಿ ಚಟುವಟಿಕೆಗಳಿಗೆ ಕೆರೆಗಳು ಆಧಾರವಾಗಿರುವುದರಿಂದ, ಇದನ್ನು ಆದ್ಯತೆಯ ಮೇರೆಗೆ ನಿರ್ವಹಿಸಲು ತಿಳಿಸಲಾಗಿದೆ.
ಸಹಾಯವಾಣಿ: ಕೆರೆ ಅಭಿವೃದ್ಧಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗಾಗಿ ಸಾರ್ವಜನಿಕರು ಹಾಗೂ ಅಧಿಕಾರಿಗಳು 'ಪಂಚಮಿತ್ರ' ಸಹಾಯವಾಣಿ ಸಂಖ್ಯೆ 8277506000 ಗೆ ಸಂಪರ್ಕಿಸಬಹುದಾಗಿದೆ.
ಗ್ರಾಮ ಪಂಚಾಯತಿಗಳ ಸಕ್ರಿಯ ಸಹಭಾಗಿತ್ವದಿಂದ ಮಾತ್ರ 'ಕೆರೆ ಹೂಳು ತೆಗೆಸಿದರೆ ಬದುಕು ಹೊರಣ' ಎಂಬ ಮಾತು ನನಸಾಗಲು ಸಾಧ್ಯ.

No comments:
Post a Comment